ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Wednesday 22 May 2013

ಕುಸುಮ-7


                “ಎಲ್ಲರಿಗಾಗಿ ವೇದ”            16.12.2012          
                       “ಬುದ್ಧಿಯ ಬಗ್ಗೆ ವೇದವು     ಏನು ಹೇಳುತ್ತದೆ”


ಹಿಂದಿನ ಮಂತ್ರದಲ್ಲಿ ಶ್ರದ್ಧೆಯ ಬಗ್ಗೆ  ಚಿಂತನೆ ನಡೆಸಿದ್ದೇವೆ. ಈಗ ಬುದ್ಧಿಯ ಬಗ್ಗೆ ವೇದವು     ಏನು ಹೇಳುತ್ತದೆ ನೋಡೋಣ.
ಅಥರ್ವ: 6-108-05
ಮೇಧಾಂ ಸಾಯಂ ಮೇಧಾಂ ಪ್ರಾಥರ್ಮೇಧಾಂ ಮಧ್ಯಂ ದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭಿರ್ವಚಸಾ  ವೇಶಯಾಮಹೇ||
ಅರ್ಥ:
ಸಾಯಮ್ = ಸಂಜೆ
ಮೇಧಾಂ = ಬುದ್ಧಿಯನ್ನು
ಆವೇಶಯಾಮಹೇ = ಜೀವನಕ್ಕೆ ಇಳಿಸಿಕೊಳ್ಳುತ್ತೇವೆ
ಪ್ರಾಥ: = ಬೆಳಿಗ್ಗೆ         
ಮೇಧಾಂ = ಬುದ್ಧಿಯನ್ನು [ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಮಧ್ಯಂದಿನಂ ಪರಿ = ಮಧ್ಯಾಹ್ನದಲ್ಲಿಯೂ
ಮೇಧಾಂ = ಬುದ್ಧಿಯನ್ನು[ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಸೂರ್ಯಸ್ಯ ರಶ್ಮಿಭಿ: = ಸೂರ್ಯ ಕಿರಣಗಳೊಂದಿಗೆ
ವಚಸಾ = [ವಿದ್ವಜ್ಜನರ ಉಪದೇಶ ]ವಚನಗಳಿಂದ
ಮೇಧಾಂ ಆವೇಶಯಾಮಹೇ = ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆ

ಈ ಮಂತ್ರವು ನಮ್ಮನ್ನು ಹೇಗೆ ಎಚ್ಚರಿಸುತ್ತದೆ! ನೋಡಿ, ನಾವು ಸದಾಕಾಲ ಬುದ್ಧಿಯನ್ನು ಜೀವನಕ್ಕೆ ಇಳಿಸಿಕೊಳ್ಳುತ್ತೇನೆಂದು ಹೇಳುವಾಗ ಜೊತೆಯಲ್ಲಿಯೇ  ವಿದ್ವಜ್ಜನರ ಉಪದೇಶಗಳಿಂದ ಸೂರ್ಯಕಿರಣಗಳೊಂದಿಗೆ  ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆಂದು  ಈ ಮಂತ್ರವು ಹೇಳಿದೆ. ಅಂದರೆ ನಮ್ಮಷ್ಟ್ಟಕ್ಕೆ  ನಮಗೆ ತೋಚಿದಂತೆ ಬುದ್ಧಿಯನ್ನು ಹರಿಬಿಡುವಂತಿಲ್ಲ. ವಿದ್ವಜ್ಜನರ ಉಪದೇಶಗಳಿಂದ ನಿನ್ನ ಬುದ್ಧಿಯನ್ನು ಹದಗೊಳಿಸಿಕೋ” ಎಂದು ಕೂಡ ವೇದವು ಸಾರುತ್ತದೆ.    ಇದರೊಡನೆಯೇ ಇನ್ನೊಂದು ಮಂತ್ರವು ಹೇಳುತ್ತದೆ…
ಅಥರ್ವ: 19-64-1]
ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ: ಪ್ರ ಯಚ್ಛತು||
ಅರ್ಥ:
ಸ ಜಾತವೇದಾ: = ಸರ್ವಜ್ಞನಾದ ಭಗವಂತನು       ಮೇ = ನನಗೆ 
ಶ್ರದ್ಧಾಂಚ ಮೇಧಾಂಚ ಪ್ರಯಚ್ಛತು = ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ.

ಸಾರ: ಭಗವಂತನನ್ನು ಪ್ರಾರ್ಥಿಸುವಾಗ  ನನಗೆ ಇದರಲ್ಲಿ ಶ್ರದ್ಧೆ ಕೊಡು ಎಂದಷ್ಟೇ ಕೇಳಲಿಲ್ಲ, ಜೊತೆಗೆ ನನಗೆ ವಿವೇಚಿಸುವ ಬುದ್ಧಿಯನ್ನೂ ಕೊಡು “ ಎಂದು ಕೇಳ ಬೇಕೆಂದು ವೇದದ ಕರೆ. ಯಾವುದನ್ನಾಗಲೀ ಕುರುಡು ಕುರುಡಾಗಿ  ಅನುಸರಿಸಬೇಡವೆಂಬುದೇ ವೇದದ ಆಶಯ. ಅದಕ್ಕಾಗಿಯೇ ಶ್ರದ್ಧೆಯೊಡನೆ ಬುದ್ಧಿಯೂ ಇರಬೇಕೆಂಬುದೇ ವೇದದ ಕರೆ.




                        “ಸತ್ಯ-ಅಸತ್ಯದ ಬಗ್ಗೆ ವೇದವು     ಏನು ಹೇಳುತ್ತದೆ”

ಮೇಲಿನ ಮಂತ್ರದಲ್ಲಿ  “ಶ್ರದ್ಧೆಯ ಜೊತೆಗೆ ಬುದ್ಧಿಯನ್ನೂ ಕೊಡೆಂದು”  ಭಗವಂತನಲ್ಲಿ ಪ್ರಾರ್ಥಿಸಿದ್ದನ್ನು ಗಮನಿಸಿದ್ದೇವೆ. ಸತ್ಯಾ ಸತ್ಯತೆಯ ಬಗ್ಗೆ ವೇದವು  ಏನು ಹೇಳುತ್ತದೆಂಬುದನ್ನು ಮುಂದಿನ ಮಂತ್ರದಲ್ಲಿ ನೋಡೋಣ.

[ಯಜುರ್ವೇದ: 19-77]
ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿ: |
ಅಶ್ರದ್ಧಾಂ ಅನೃತೇs ದಧಾಚ್ಛದ್ಧಾಂ ಸತ್ಯೇ ಪ್ರಜಾಪತಿ: ||

ಅರ್ಥ:
ಪ್ರಜಾಪತಿ: = ಭಗವಂತನು
ರೂಪೇ ದೃಷ್ಟ್ವಾ = ಸತ್ಯಾಸತ್ಯತೆಗಳ ರೂಪಗಳನ್ನು ನೋಡಿ
ಸತ್ಯಾನೃತೇ ವ್ಯಾಕರೋತ್ = ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು
ಅನೃತೇ = ಅಸತ್ಯದಲ್ಲಿ
ಅಶ್ರದ್ಧಾಂ ಅದಧಾತ್ = ಅಶ್ರದ್ಧೆಯನ್ನು ನೆಲೆಗೊಳಿಸಿದನು
ಸತ್ಯೇ = ಸತ್ಯದಲ್ಲಿ
ಶ್ರದ್ಧಾಂ ಅದಧಾತ್ = ಶ್ರದ್ಧೆಯನ್ನು ನೆಲೆಗೊಳಿಸಿದನು
ಭಾವಾರ್ಥ:
ಭಗವಂತನು ಸತ್ಯಾ ಅಸತ್ಯಗಳೆರಡನ್ನೂ ನೋಡಿ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸಿದನು. ಅಸತ್ಯದಲ್ಲಿ ಅಶ್ರದ್ಧೆಯನ್ನೂ ಸತ್ಯದಲ್ಲಿ ಶ್ರದ್ಧೆಯನ್ನೂ ನೆಲಗೊಳಿಸಿದನು.
ಬಹಳ ಸುಲಭವಾಗಿ ಅರ್ಥವಾಗುವಂತಹ ವೇದ ಮಂತ್ರ ಇದು. ಮಂತ್ರವಾದರೋ ಏನನ್ನು ಒತ್ತಿ ಹೇಳುತ್ತದೆ? ಅಸತ್ಯವನ್ನು ನಂಬಬೇಡ. ಸತ್ಯದಲ್ಲಿ ಶ್ರದ್ಧೆ ಇಡು. ಹಿಂದಿನ ಲೇಖನದಲ್ಲಿ ಶ್ರದ್ಧೆ ಎಂದರೇನು?  ಎಂಬುದಕ್ಕೆ      ಶ್ರದ್ಧೆ ಎಂದರೆ “ಸತ್ಯದ ಧಾರಣೆ” ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ಮಂತ್ರದಲ್ಲೂ ಅದನ್ನೇ ಹೇಳುತ್ತದೆ. ಭಗವಂತನೇ ಸತ್ಯಾ-ಅಸತ್ಯಗಳನ್ನು ಬೇರ್ಪಡಿಸಿ  ಸತ್ಯದಲ್ಲಿ ಮಾತ್ರವೇ ಶ್ರದ್ಧೆಯನ್ನು ನೆಲೆಗೊಳಿಸುತ್ತಾನೆ, ಎಂದು ನಿಖರವಾಗಿ ಹೇಳಿದೆ. ಅಂದರೆ ಯಾವುದು ಅಸತ್ಯವೆಂದು ಮನಗಾಣುತ್ತದೋ  ಅದನ್ನು ಯಾರೇ ಹೇಳಲಿ, ಅದನ್ನು ಅನುಸರಿಸಿದರೆ ಅದು   ವೇದ ವಿರೋಧಿ ನಡೆಯಾಗುತ್ತದೆ.
ಆದ್ದರಿಂದ ನಾವು ಧರ್ಮದ ಹೆಸರಲ್ಲಿ ಮಾಡುವ ಆಚರಣೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅದು, ಅಸತ್ಯ, ಅವೈಜ್ಞಾನಿಕ, ಸಮಾಜ ವಿರೋಧಿ, ಎನಿಸಿದರೆ ಅಚರಿಸಬಾರದು, ಅದು ಸತ್ಯಪಥವಾಗಿದ್ದು ಸಮಾಜ ಕ್ಕೆ ಪೂರಕವಾಗಿದ್ದರೆ ಮಾತ್ರ ಅದನ್ನು ಅನುಸರಿಸಬೇಕು. ಇದು ವೇದದ ಕರೆ.

No comments:

Post a Comment